top of page

ಡಾ|| ಮಳಿಯೆ ಗೋಪಾಲಕೃಷ್ಣರಾಯರ ಜೀವನ, ಸಾಧನೆಗಳ ಚಿತ್ರಣ - 1

Updated: Aug 18, 2022

ಡಾ|| ಮಳಿಯೆ ಗೋಪಾಲಕೃಷ್ಣರಾಯರ ಜೀವನ, ಸಾಧನೆಗಳ ಚಿತ್ರಣವಾದ ***ಧನ್ವಂತರಿಯ ಸಾಹಿತ್ಯ ಸೌರಭ*** ಲೇಖನಮಾಲೆ. ಭಾಗ ಒಂದು.



ಧನ್ವಂತರಿ ಎಂಬುದು ಸುಪ್ರಸಿದ್ಧ ಆಯುರ್ವೇದ ವೈದ್ಯ ಮಳಿಯೆ ಗೋಪಾಲಕೃಷ್ಣರಾಯರ ಜೀವನ, ಸಾಧನೆ ಹಾಗೂ ಸಾಹಿತ್ಯದ ವಿವರಗಳನ್ನೊಳಗೊಂಡ ಒಂದು ಅಪರೂಪದ ಜೀವನ ಚರಿತ್ರೆ. ಈ ಮಹಾನ್ ಸಾಧಕರ ಜೀವಿತಾವಧಿಯಲ್ಲೇ ೧೯೮೮ರಲ್ಲಿ ಲೋಕಾರ್ಪಣೆಗೊಂಡ ಈ ಜೀವನಚಿತ್ರವು ಹಾಸನದ ಸುಧಾರ್ಥಿಯು ರಚಿಸಿದ್ದು. "ಒಬ್ಬ ವೈದ್ಯನ ಜೀವನ ಸಾಧನೆ, ಸಾಹಿತ್ಯಕೃತಿಗಳು, ಜನಸಾಮಾನ್ಯರ ಸ್ವಾಸ್ಥ್ಯ ವಿಚಾರಗಳಿಗೆ ಸಂಬಂಧಿಸಿದ ಮಾಹಿತಿಗಳು, ಔಷಧಗಳ ವಿಚಾರ ಇತ್ಯಾದಿ ವಿವರಗಳಿಗೆ ಸಂಬಂಧಿಸಿದಂತೆ ಇಷ್ಟು ವ್ಯಾಪಕವಾದ; ಸಮರ್ಪಕವಾದ ಕೃತಿಯು ನನಗೆ ತಿಳಿದಂತೆ ಆಂಗ್ಲಾಭಾಷೆಯಲ್ಲಿಯೂ ರಚನೆಯಾಗಿರುವುದಿಲ್ಲ. ನನ್ನ ಸಮಗ್ರ ಸಾಹಿತ್ಯ ಕೃತಿಗಳ ಸಾರವನ್ನು ಹೀರಿ; ’ಲೂಟಿಮಾಡಿ’ ರಚನೆಗೊಂಡಿರುವ ಅಪರೂಪದಕೃತಿ ಈ ಧನ್ವಂತರಿ" ಎಂಬುದಾಗಿ ಬರಹದ ಕಥಾನಾಯಕ ಡಾ|| ಮಳಿಯೆ ಗೋಪಾಲಕೃಷ್ಣರಾಯರಿಂದಲೇ ಮುಕ್ತಮನಸ್ಸಿನ ಮೆಚ್ಚುಗೆ ಪಡೆದ ಈ ’ಧನ್ವಂತರಿ’ ಯಲ್ಲಿ ಹಲವಾರು ಮಹತ್ವದ ಮಾಹಿತಿಗಳು ಅಡಕವಾಗಿವೆ. ಈ ಮಾಹಾನ್ ಚೇತನವು ದಿನಾಂಕ ೧೧-೦೨-೧೯೯೧ ರಂದು ವಿಶ್ವಾತ್ಮನೊಂದಿಗೆ ವಿಲಿನವಾಯಿತು. ೩೪ ವರ್ಷಗಳ ಹಿಂದಿನ ಈ ಅಮೂಲ್ಯ ಸಾಹಿತ್ಯಕೃತಿಯು ಆಸಕ್ತ ಓದುಗರಿಗೆ ಉಪಲಬ್ಧವಿರಲಿಲ್ಲ. ಡಾ|| ರಾಯರ ಮಗ ಡಾ|| ಮುರಳೀಧರರಾಯರೂ ತಂದೆಯಂತೆಯೇ ಪ್ರಸಿದ್ಧರಾಗಿದ್ದವರು. ಇವರ ಮಗ ಡಾ|| ಎಂ. ಶರತ್ ಚಂದ್ರ ಅವರು ತಮ್ಮ ತಾತನಜೀವನಾದರ್ಶವನ್ನು ಮುಂದುವರೆಸಿ, ಬೆಂಗಳೂರಿನಲ್ಲೇ ವೈದ್ಯಕೀಯವೃತ್ತಿಯನ್ನು ಮುಂದುವರೆಸಿರುವವರು. ಚಿಕಿತ್ಸೆಗಾಗಿ ತಮ್ಮಲ್ಲಿಗೆ ಬರುವ ಹಲವಾರು ಆಸಕ್ತರು ಈ ’ಧನ್ವಂತರಿ’ ಯನ್ನು ಅಪೇಕ್ಷಿಸುವುದನ್ನು ನನ್ನ ಗಮನಕ್ಕೆತಂದು, ಅದರ ಪುನರ್ಮುದ್ರಣಕ್ಕೆ ಸೂಚಿಸಿದರು. ಈ ಮಧ್ಯೆ ’ಫೇಸ್ ಬುಕ್ಕಿನ’ ಅಂಗಳದಲ್ಲಿಯೂ ಒಮ್ಮೆ ಈ ಕೃತಿಯನ್ನು ಕುರಿತು ಸಂಕ್ಷಿಪ್ತವಾಗಿ ಪ್ರಕಟಿಸಲಾಗಿತ್ತು. ಈಗ ಡಾ|| ಎಂ. ಶರತ್ ಚಂದ್ರ ಅವರ ಅಪೇಕ್ಷೆಯ ಮೇರೆಗೆ ’ಧನ್ವಂತರಿ’ ಯು ಮರುಮುದ್ರಣಕ್ಕೆ ಪ್ರಾರಂಭವಾಗಿದೆ. ಅದರಲ್ಲಿನ ಕೆಲವು ಅಮೂಲ್ಯ ಮಾಹಿತಿಗಳು ಇಲ್ಲಿನ ಓದುಗರಿಗೋ ದೊರೆಯುವಂತಾಗಲೆಂಬ ಉದ್ದೇಶದಿಂದ ಈ ಲೇಖನದಲ್ಲಿ ಕೆಲವೊಂದು ಅತ್ಯುಪಯುಕ್ತ ಮಾಹಿತಿಗಳನ್ನು ಅಳವಡಿಸಲಾಗಿದೆ. ಆಸಕ್ತ ಓದುಗರಿಗೆ ಇದು ಮೆಚ್ಚುಗೆಯಾಗಿ, ಅವರಿಗೆ ಉಪಯುಕ್ತವಾಗುವುದೆಂದು ನಿರೀಕ್ಷಿಸಿದ್ದೇನೆ. ನಮ್ಮ ನಿರೀಕ್ಷೆಗಳು ಏನೇ ಇರಲೀ; ಜಗತ್ತಿನ ಪ್ರತಿಯೊಂದು ಘಟನೆಗಳೂ ಪ್ರಾಕೃತಿಕವಾಗಿ, ಗಣಿತಾತ್ಮಕವಾಗಿಯೇ ನಡೆಯುವುದು ನಿಶ್ಚಿತ. ಕೆಲಸ ನಿರ್ವಹಿಸಲಷ್ಟೇ ನಮಗೆ ಅಧಿಕಾರವಿರುವುದು! ಫಲದಮೇಲೆಂದಿಗೂ ಅಧಿಕಾರವಿಲ್ಲ.

ಧನ್ವಂತರಿಯ ಮರುಮುದ್ರಣದ ಕರಡುಪ್ರತಿಯನ್ನು ತಿದ್ದುವ ಸನ್ನಿವೇಶದಲ್ಲಿ ಕೆಲವು ಅಮೂಲ್ಯ ಮಾಹಿತಿಗಳು ನನ್ನನ್ನಾಕರ್ಷಿಸಿದುವು. ಅವುಗಳಲ್ಲಿ ಕೆಲವನ್ನು ಸಂಗ್ರಹಿಸಿ ಈ ಲೇಖನಮಾಲೆಯಲ್ಲಿ ಅಳವಡಿಸಲಾಗಿದೆ. ಮಹಾನ್ ಮೇಧಾವಿ ಪಂಡಿತ ತಾರಾನಾಥರ ಪ್ರಮುಖ ಶಿಷ್ಯರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಡಾ|| ರಾಯರು ಸುಮಾರು ೬೦ ವರ್ಷಗಳ ಕಾಲ ತಮ್ಮ ಏಕಮೂಲಿಕಾ ಪ್ರಯೋಗಕ್ಕಾಗಿ ಸಾರ್ವಜನಿಕರಿಗೆ ಉಚಿತವಾಗಿ ವೈದ್ಯಕೀಯ ಸೇವೆ ಸಲ್ಲಿಸಿದವರು. ತಮ್ಮ ಜೀವಿತಾವಧಿಯಲ್ಲಿ ವ್ಯಕ್ತಿಯ ಸ್ವಾಸ್ಥ್ಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಹಲವಾರು ಪುಸ್ತಕಗಳನ್ನೂ; ಸಾವಿರಾರು ಲೇಖನಗಳನ್ನೂ ಆಯುರ್ವೇದ ಶಾಸ್ತ್ರಾನುಸಾರವಾಗಿ ಬರೆದು ಪ್ರಕಟಿಸಿದವರು ಅವುಗಳ ಸೂಕ್ಷ್ಮಾತಿ ಸೂಕ್ಷ್ಮ ಸ್ವರೂಪದ್ದಾದ ಈ ಲೇಖನದಲ್ಲಿ ನನಗೆ ಸಾಧ್ಯವಾದಷ್ಟನ್ನು ಸೂಚಿಸಿದ್ದೇನ್ನೆ. ವಿಸ್ತಾರವಾದ ಮಾಹಿತಿಗಾಗಿ ಓದುಗರು ’ಧನ್ವಂತರಿ’ ಯನ್ನೇ ನೋಡಿ ತಿಳಿಯಬೇಕು. ಅಲ್ಲಿಯೂ ಸಂಪೂರ್ಣ ಮಾಹಿತಿ ದೊರೆಯಲಿಲ್ಲವೆಂದು ಆಕ್ಷೇಪಿಸುವವರು ಬೆಂಗಳೂರಿನ ’ಆಯುರ್ವೇದ ಪ್ರತಿಷ್ಠಾನ’ ದಲ್ಲಿ ದೊರೆಯುವ ಡಾ|| ರಾಯರ ಮೂಲಸಾಹಿತ್ಯಕೃತಿಗಳನ್ನೇ ಓದಬಹುದಾಗಿದೆ.

ಜಗತ್ತಿನಲ್ಲಿ ಕೋಟ್ಯಾಂತರ ಜನಗಳ ದಿಕ್ಕು ತಪ್ಪಿಸಿರುವ,

ತಪ್ಪಾಗಿ ಗುರುತಿಸಲಾಗುವ ಒಂದು ವಿಚಿತ್ರ ವ್ಯಾಧಿ ’ ಮಧುಮೇಹ ’ (ಡಯಾಬಿಟೀಸ್)

ಪ್ರಿಯ ಓದುಗರೇ, ಈ ವಿಚಾರಕ್ಕೆ ಸಂಬಂಧಿಸಿದಂತೆ ಜನಸಾಮಾನ್ಯರ ತಪ್ಪು ಗ್ರಹಿಕೆ ಹಾಗೂ ಭಯ, ಭೀತಿ, ಆತಂಕಗಳು ಒಂದುರೀತಿಯದಾದರೆ, ಹಿಂದಿನ, ಇಂದಿನ ಹಾಗೂ ಮುಂದಿನ ವೈದ್ಯರುಗಳ ಸ್ವಹಿತಾಸಕ್ತಿ ಹಾಗೂ ಅವರ ಪಾರಂಪರಿಕ ಅಜ್ಞಾನದಿಂದ ಕೂಡಿದ ಚಿಕಿತ್ಸಾಕ್ರಮದ ಅವಿವೇಕದಿಂದಾಗಿ ಜಗತ್ತಿನಲ್ಲಿ ಕೋಟ್ಯಾಂತರ ಜನಗಳು ಈ ’ಮಧುಮೇಹ’ ವೆಂಬ ತಪ್ಪು ಗ್ರಹಿಕೆಯ ರೋಗಿಯಪಟ್ಟ ಕಟ್ಟಿಸಿಕೊಂಡು ಜೀವಮಾನಪೂರ್ತ ಅನಗತ್ಯವಾಗಿ ಡಯಾಬಿಟಿಕ್ ಮಾತ್ರೆಗಳು ಹಾಗೂ ಇನ್ಸುಲಿನ್ ಪಡೆಯುವ ಅನುಚಿತ ಶಿಕ್ಷೆಗೆ ಗುರಿಯಾಗುತ್ತಿದ್ದಾರೆ! ಈ ಕುರಿತು ಭಾರತೀಯ ವೈದ್ಯಶಾಸ್ತ್ರದ ಖಚಿತವಾದ ವಿವರಣೆ ಕುರಿತು ’ಧನ್ವಂತರಿಯ’ ಹೇಳಿಕೆ ಏನೆಂಬುದನ್ನು ಇಲ್ಲಿ ಸರಳವಾಗಿ; ಸ್ಪಷ್ಟವಾಗಿ ಮಾಹಿತಿಯನ್ನು ತಿಳಿಯೋಣ ಬನ್ನಿ.

ಡಾ|| ರಾಯರದು ಒಂದು ರೀತಿಯ ವಿಚಿತ್ರ ಸ್ವಭಾವವಾಗಿತ್ತು. ಅವರ ಪುತ್ರ ಸ್ವರ್ಗೀಯ ಡಾ||ಮುರಳೀಧರರಾಯರು ಹಾಗೂ ಮಗಳು ಡಾ|| ಚಿತ್ರಾಂಗದಾ ಅವರು ಹೇಳುತ್ತಿದ್ದ ಕ್ರಮದಲ್ಲೇ ತಿಳಿಯುವುದಾದರೆ, ಸಾಕ್ಷಾತ್ ಬ್ರಹ್ಮನೇ ಎದುರುಬಂದರೂ, ಡಾ|| ರಾಯರು ’ನಿನ್ನ ಸೃಷ್ಟಿಯಲ್ಲಿ ಇಂತಿಂಥ ಲೋಪಗಳು ಉಳಿದಿವೆ’ ಎಂದು ದಾಕ್ಷಿಣ್ಯವಿಲ್ಲದೇ ಹೇಳುವವರಾಗಿದ್ದರು! ಧನ್ವಂತರಿಯಲ್ಲಿ ಅಡಕವಾಗಿರುವ ಡಾ|| ರಾಯರ ವ್ಯಕ್ತಿಚಿತ್ರಣಕ್ಕೆ ಸಂಬಂಧಿಸಿದ ಮಾಹಿತಿಗಳು ಈ ಹಿಂದೆ ಈ ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗಿರುವ ಕಾರಣ ಅಲ್ಲಿನ ವಿವರಗಳನ್ನು ಇಲ್ಲಿ ಸೇರಿಸಿಲ್ಲ. ಡಾ|| ರಾಯರ ಸಾಹಿತ್ಯಕೃತಿಗಳ ಮಾಹಿತಿಯನ್ನು ಕುರಿತಂತೆ ಕಾಣಬರುವ ಕೆಲವು ವಿಚಾರಗಳನ್ನಿಲ್ಲಿ ಗಮನಿಸೋಣ ಬನ್ನಿ.

- ಸುಧಾರ್ಥಿ ಹಾಸನ.

(ಭಾಗ ಎರಡರಲ್ಲಿ ಮುಂದುವರೆಯುತ್ತದೆ) ***

49 views0 comments
bottom of page